ಬೆಂಗಳೂರು, ಜೂ.21- ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 6.30ರಲ್ಲಿ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ-7ರ ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ನಡೆದ ಈ ಅಪಘಾತದಲ್ಲಿ ನಾಗಾವಾರ, ಗೋವಿಂದಪುರ, ಎಚ್ಬಿಆರ್ ಲೇಔಟ್ ನಿವಾಸಿಗಳಾದ ಮಹಮ್ಮದ್ ಆಲಿ ಅಯಾನ್ (17), ಮಹಮ್ಮದ್ ಅಮ್ಜದ್ ಖಾನ್ (17), ಸಯ್ಯದ್ ರಿಯಾಜ್ (22)ಸಾವನ್ನಪ್ಪಿದ್ದಾರೆ.
ಯಲಹಂಕದ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಡಿಯೋ ಮತ್ತು ಆರ್ಎಕ್ಸ್ ದ್ವಿಚಕ್ರ ವಾಹನದಲ್ಲಿ ಈ ಯುವಕರು ವೀಲಿಂಗ್ ಮಾಡುತ್ತಿದ್ದರು. ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು, ಮತ್ತೊಂದರಲ್ಲಿ ಒಬ್ಬರು ವೀಲಿಂಗ್ ಮಾಡುವಾಗ ಅತಿ ವೇಗವಾಗಿ ಹೋಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ.
ಅಪಘಾತದಿಂದ ಕೆಳಗೆ ಬಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿರಿಸಲಾಗಿದೆ. ಸ್ಥಳಕ್ಕೆ ದಾವಿಸಿದ ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
Garddi Gammath News Latest Kannada News